ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನನಗೆ ನನ್ನ ನೆರೆಹೊರೆಯವರ ಬಗ್ಗೆ ನಿರಂತರ ಉಪದೇಶ ಮಾಡುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ಅವರು ನನ್ನ ನೆರೆಯವನನ್ನು ನನ್ನ ಆಸ್ತಿಯಲ್ಲಿ ಹಕ್ಕುದಾರನನ್ನಾಗಿ ಮಾಡುತ್ತಾರೋ ಎಂದು ನಾನು ಭಾವಿಸತೊಡಗಿದೆ." Sahih/Authentic. - Muslim
explain-icon

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನೆರೆಹೊರೆಯವರ ಬಗ್ಗೆ ಕಾಳಜಿ ವಹಿಸಬೇಕೆಂದು ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವರಿಗೆ ಪದೇ ಪದೇ ಆದೇಶಿಸುತ್ತಿದ್ದರು. ನೆರೆಹೊರೆಯವರು ಎಂದರೆ ಮನೆಯ ಸಮೀಪದಲ್ಲಿ ವಾಸಿಸುವವರು. ಅವರು ಮುಸ್ಲಿಮರಾಗಿದ್ದರೂ ಅಲ್ಲದಿದ್ದರೂ, ಸಂಬಂಧಿಕರಾಗಿದ್ದರೂ ಅಲ್ಲದಿದ್ದರೂ ಅವರು ನೆರೆಹೊರೆಯವರಾಗಿದ್ದಾನೆ. ಅವರ ಹಕ್ಕುಗಳನ್ನು ಸಂರಕ್ಷಿಸಬೇಕು ಮತ್ತು ಅವರಿಗೆ ತೊಂದರೆ ಕೊಡಬಾರದು. ಅವರಿಗೆ ಒಳಿತು ಮಾಡಬೇಕು ಮತ್ತು ಅವರು ತೊಂದರೆ ಕೊಟ್ಟರೆ ತಾಳ್ಮೆಯಿಂದಿರಬೇಕು. ಒಬ್ಬ ವ್ಯಕ್ತಿ ನಿಧನನಾದರೆ ಅವನ ನೆರೆಹೊರೆಯವರಿಗೂ ಅವನ ಆಸ್ತಿಯಲ್ಲಿ ಹಕ್ಕಿದೆ ಎಂಬ ಕುರ್‌ಆನ್ ವಚನ ಅವತೀರ್ಣವಾಗಬಹುದೋ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಾವಿಸುವಷ್ಟರ ಮಟ್ಟಿಗೆ ಈ ರೀತಿ ನೆರೆಹೊರೆಯವರ ಹಕ್ಕುಗಳನ್ನು ಗೌರವಿಸುವುದರ ಬಗ್ಗೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನಿರಂತರ ಉಪದೇಶಿಸುತ್ತಿದ್ದರು.

explain-icon

ಹದೀಸಿನ ಪ್ರಯೋಜನಗಳು

  • ನೆರೆಹೊರೆಯವರ ಹಕ್ಕುಗಳ ಮಹತ್ವ ಮತ್ತು ಅವುಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆಯನ್ನು ಈ ಹದೀಸ್ ತಿಳಿಸುತ್ತದೆ.
  • ನೆರೆಹೊರೆಯವರ ಹಕ್ಕುಗಳ ಬಗ್ಗೆ ಪದೇ ಪದೇ ಉಪದೇಶ ಮಾಡಲಾಗಿರುವುದು ನೆರೆಹೊರೆಯವರನ್ನು ಗೌರವಿಸುವುದು, ಅವರೊಡನೆ ದಯೆ ಮತ್ತು ಕರುಣೆಯಿಂದ ವರ್ತಿಸುವುದು, ಅವರಿಗೆ ಸಹಾಯ ಮಾಡುವುದು, ಅವರಿಗೆ ಹಾನಿಯಾಗುವುದನ್ನು ತಪ್ಪಿಸುವುದು, ಅವರು ಅನಾರೋಗ್ಯಕ್ಕೆ ಒಳಗಾದರೆ ಭೇಟಿ ಮಾಡುವುದು, ಅವರಿಗೆ ಸಂತೋಷವಾದಾಗ ಅಭಿನಂದಿಸುವುದು ಮತ್ತು ಅವರಿಗೆ ದುಃಖವಾಗುವಾಗ ಸಾಂತ್ವನ ಹೇಳುವುದು ಅತ್ಯಗತ್ಯವೆಂದು ಒತ್ತಿಹೇಳುವುದಕ್ಕಾಗಿದೆ.
  • ನೆರೆಹೊರೆಯವರಲ್ಲಿ ಯಾರ ಬಾಗಿಲು ನಮ್ಮ ಬಾಗಿಲಿಗೆ ಹತ್ತಿರವಿದೆಯೋ ಅವರ ಹಕ್ಕುಗಳಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ.
  • ಇಸ್ಲಾಂ ಧರ್ಮದ ಪರಿಪೂರ್ಣತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಈ ಧರ್ಮವು ಸಮಾಜ ಸುಧಾರಣೆಗೆ ಅತ್ಯಗತ್ಯವಾದ ನೆರೆಹೊರೆಯವರಿಗೆ ಒಳಿತು ಮಾಡುವುದು ಮತ್ತು ಅವರಿಂದ ಹಾನಿಯನ್ನು ತಪ್ಪಿಸುವುದನ್ನು ಬೋಧಿಸುತ್ತದೆ.
explain-icon

ವರ್ಗಗಳು

explain-icon

ಇನ್ನಷ್ಟು